Sunday, September 30, 2018

**RSGE**::: ಹುದ್ದೆ ಕಡಿತ, ನೇಮಕಾತಿ ಸ್ಥಗಿತ?,

ಸರ್ಕಾರದಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಮುಖ್ಯ ಕಾರ್ಯದರ್ಶಿ ಇಲಾಖಾವಾರು ಮಾಹಿತಿ ಕೇಳಿದ ಬೆನ್ನ ಹಿಂದೆಯೇ, ಹುದ್ದೆಗಳ ಕಡಿತ ಮಾಡಬೇಕು, ಹೊಸ ನೇಮಕಾತಿ ಮಾಡಬಾರದೆಂಬ ಶಿಫಾರಸು ಮಾಡಲು ಹಣಕಾಸು ಇಲಾಖೆ ಸಜ್ಜಾಗಿದೆ.
ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಆಯೋಗ ಆಡಳಿತ ಸುಧಾರಣೆಗೆ ಸಂಬಂಧಿಸಿ ತನ್ನ ಎರಡನೇ ವರದಿಯಲ್ಲಿರುವ ಅಂಶಗಳನ್ನು ಆಧರಿಸಿ ಸಚಿವ ಸಂಪುಟಕ್ಕೆ ಕಡತ ಮಂಡಿಸಲು ಸಿದ್ಧತೆ ನಡೆಸಿದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ. ಸರ್ಕಾರದಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲದೆ ಆಡಳಿತದ ಗುಣಮಟ್ಟ ದಿನೇದಿನೆ ಕುಸಿಯುತ್ತಿದೆ. ವೇತನ ಪರಿಷ್ಕರಣೆ ಆಯೋಗ ಸಾಧ್ಯವಾದಷ್ಟು ಹುದ್ದೆಗಳನ್ನು ನೇಮಕಾತಿ ಮಾಡುವ ಅಗತ್ಯವನ್ನು ಪ್ರತಿಪಾದಿಸಿತ್ತು. ಅದರ ಆಧಾರದಲ್ಲೇ ಮುಖ್ಯ ಕಾರ್ಯದರ್ಶಿ ಅವರು ಇಲಾಖಾವಾರು ಮಾಹಿತಿ ಕೋರಿದ್ದರು.
2ನೇ ವರದಿ ಶಿಫಾರಸು
ಸರ್ಕಾರಿ ನೌಕರರ ಸಿಎಲ್ 12 ರಿಂದ 8ಕ್ಕೆ ಇಳಿಸಬೇಕು. ನಾಲ್ಕನೇ ಶನಿವಾರ ರಜೆ ನೀಡಬೇಕು.
ವಿವಿಧ ಜಯಂತಿಗಳಿಗೆ ನೀಡುವ ರಜೆ ರದ್ದು ಮಾಡಬೇಕು.
ಕ್ಷೇತ್ರ ಇಲಾಖೆಗಳ ಸಿಬ್ಬಂದಿ ಸಚಿವಾಲಯಕ್ಕೆ ನಿಯೋಜನೆ ಮೇಲೆ ಬರಲು ಅವಕಾಶ.
ಎಸ್​ಒಗಳಿಗೆ ಬಡ್ತಿ ನೀಡಲು ಪದವಿ ಕಡ್ಡಾಯ ಮಾಡಬೇಕು.
ಸಚಿವಾಲಯದಲ್ಲಿ ಕಿರಿಯ ಸಹಾಯಕರು ಹಾಗೂ ಟೈಪಿಸ್ಟ್ ಹುದ್ದೆಯನ್ನು ಸಂಪೂರ್ಣ ರದ್ದು ಮಾಡಬೇಕು.
ನೌಕರರ ವಿರೋಧ
ಸಚಿವಾಲಯ ನೌಕರರ ಸಂಘ ಸೇರಿ ವಿವಿಧ ನೌಕರರ ಸಂಘಟನೆಗಳು ಈ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿವೆ. ಈಗಾಗಲೇ ಸಿಬ್ಬಂದಿ ಸಂಖ್ಯೆ ಕಡಿಮೆ ಇರುವುದರಿಂದ ನೇಮಕಾತಿ ಮಾಡಬೇಕು. ಯಾವುದೇ ಹುದ್ದೆ ರದ್ದು ಮಾಡಬಾರದು, ರಜೆಗಳ ಸಂಖ್ಯೆ ಕಡಿತ ಬೇಡ. ಉಪ ಕಾರ್ಯದರ್ಶಿಗಳಿಗೆ ಕೆಎಎಸ್ ಅಧಿಕಾರಿಗಳಿಗೆ ಸರಿಸಮಾನ ವೇತನ ನೀಡಬೇಕು. ವೇತನ ಪರಿಷ್ಕರಣೆ ಸಂದರ್ಭದಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು. ಎನ್​ಪಿಎಸ್ ಸಂಪೂರ್ಣ ರದ್ದು ಮಾಡಿ, ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂಬುದು ನೌಕರರ ಬೇಡಿಕೆಗಳಾಗಿವೆ.
ವೇತನ ಪರಿಷ್ಕರಣೆ ಆಯೋಗದ ಎರಡನೇ ವರದಿ ನೌಕರರ ವಿರೋಧಿಯಾಗಿದೆ. ಸರ್ಕಾರ ಏನಾದರೂ ಈ ವರದಿ ಜಾರಿಗೆ ಮುಂದಾದರೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಜಾರಿಗೆ ತರಲು ಬಿಡುವುದಿಲ್ಲ.
| ಸಿ. ಗುರುಸ್ವಾಮಿ, ಅಧ್ಯಕ್ಷ ಸಚಿವಾಲಯ ನೌಕರರ ಸಂಘ

No comments:

Post a Comment

ಅನಿಸಿಕೆ ತಿಳಿಸಿ

ಹೆಚ್ಚು ಓದಿದವು