Friday, October 12, 2018

**RSGE**::: ಬಡ್ತಿ ಮೀಸಲು ಮತ್ತೆ ಯಥಾಸ್ಥಿತಿ,

ಬಡ್ತಿ ಮೀಸಲಿಗೆ ಸಂಬಂಧಿಸಿ ಯಥಾಸ್ಥಿತಿ ಕಾಯ್ದು ಕೊಳ್ಳುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿದೆ. ಎಸ್ಸಿ, ಎಸ್ಟಿ ನೌಕರರ ಹಿತ ಕಾಯುವ ಹಾಗೂ ಬಡ್ತಿ ಮೀಸಲಾತಿ ಮುಂದುವರಿಕೆಗೆ ಅವಕಾಶ ನೀಡುವ ತಿದ್ದುಪಡಿ ಕಾಯ್ದೆ ಜಾರಿ ಅನಿವಾರ್ಯವೆಂಬ ರಾಜ್ಯದ ವಾದಕ್ಕೆ ಸುಪ್ರೀಂ ಕೋರ್ಟ್ ಸೊಪು್ಪಹಾಕಿಲ್ಲ.
‘ಪ್ರಕರಣದ ಸೂಕ್ಷ್ಮತೆ ಹಾಗೂ ಜರೂರತ್ತನ್ನು ಪರಿಗಣಿಸಿ ಆದ್ಯತೆ ಮೇರೆಗೆ ಅಕ್ಟೋಬರ್ 23ರಿಂದ ಸಮಗ್ರ ವಿಚಾರಣೆ ನಡೆಸಲಿದ್ದೇವೆ’ ಎಂದು ನ್ಯಾಯಮೂರ್ತಿ ಉದಯ್ ಲಲಿತ್ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ತಿಳಿಸಿದೆ.
ಸದ್ಯಕ್ಕೇನೂ ಹೇಳಲ್ಲ: ಕಾಯ್ದೆ ಮುಂದುವರಿಕೆಗೆ ಅವಕಾಶ ನೀಡದಿದ್ದರೆ ಸಾವಿರಾರು ಎಸ್ಸಿ, ಎಸ್ಟಿ ನೌಕರರ ಸ್ಥಿತಿ ಡೋಲಾಯಮಾನವಾಗಲಿದೆ. ಅಂತಿಮ ತೀರ್ಪು ಬರುವ ತನಕ ಅವಕಾಶ ಕೊಡಿ ಎಂದು ಎಸ್ಸಿ, ಎಸ್ಟಿ ನೌಕರರ ಪರ ವಕೀಲೆ ಇಂದಿರಾ ಜೈಸಿಂಗ್ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಲಲಿತ್, ಸದ್ಯಕ್ಕೆ ನಾವು ಏನೂ ಹೇಳುವುದಿಲ್ಲ. ವಿಚಾರಣೆ ಹಂತದಲ್ಲಿ ಎಲ್ಲರ ವಾದಗಳನ್ನೂ ಆಲಿಸಲಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಪರ ವಾದಿಸಿದ ಮುಕುಲ್ ರೋಹಟ್ಗಿ, ಕೋರ್ಟ್ ತೀರ್ಪಿನ ತನಕ ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ಅಡ್ವೊಕೇಟ್ ಜನರಲ್ ತಿಳಿಸಿದ್ದರು. ಆದರೆ, ರಾಜ್ಯದಲ್ಲಿ ಕಾಯ್ದೆಯ ಅನುಷ್ಠಾನ ಆಗದಿರುವುದರಿಂದ ಸಮಸ್ಯೆಯಾಗಿದೆ. ಇದನ್ನು ಜಾರಿ ಮಾಡಲೇ ಬೇಕಾದ ಪರಿಸ್ಥಿತಿ ಇದೆ ಎಂದರು. ಇದಕ್ಕೆ ದನಿಗೂಡಿಸಿದ ಇಂದಿರಾ ಜೈಸಿಂಗ್, ಕಾಯ್ದೆಯನ್ನು ಜಾರಿಗೊಳಿಸಿ ಸೂಪರ್ ನ್ಯೂಮರಿ ಹುದ್ದೆಗಳನ್ನು ಸೃಷ್ಟಿಸುವಂತಹ ಅವಕಾಶ ಕಾನೂನಿನಲ್ಲಿದೆ ಎಂದರು.
ಅರ್ತಾಕ ವಾದ: ಎರಡೂ ವಾದಗಳಿಗೆ ಆಕ್ಷೇಪ ತೆಗೆದ ಬಿ.ಕೆ. ಪವಿತ್ರಾ ಪರ ವಕೀಲ ರಾಜೀವ್ ಧವನ್, ಸುಪ್ರೀಂಕೋರ್ಟ್ ತೀರ್ಪಗಳನ್ನು ಬದಿಗೊತ್ತಲೆಂದೇ ಸರ್ಕಾರಗಳು ಕಾಯ್ದೆಗಳನ್ನು ಜಾರಿಗೆ ತರುತ್ತಿರುವುದೇ ತಪ್ಪು. ಅದಲ್ಲದೆ, ಅಂತಿಮ ತೀರ್ಪು ಬರುವ ತನಕ ಮುಂಬಡ್ತಿಗೆ ಅವಕಾಶ ನೀಡಬೇಕು ಎಂದು ವಾದಿಸುವುದೇ ಅರ್ತಾಕ. ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠ ಮುಂಬಡ್ತಿ ವೇಳೆ ಕೆನೆ ಪದರ ತತ್ವ ಅಳವಡಿಸಬೇಕು ಎಂದೂ ತೀರ್ಪು ನೀಡಿರುವುದರಿಂದ ಆ ಹಿನ್ನೆಲೆಯಲ್ಲಿಯೂ ನಾವು ಸದರಿ ಪ್ರಕರಣವನ್ನು ನೋಡಬೇಕಾಗುತ್ತದೆ ಎಂದು ವಿವರಿಸಿದರು. ಇದೇ ವೇಳೆ, ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆ ಮಾಡಿದೆ ಎಂದು ಸರ್ಕಾರದ ವಿರುದ್ಧ ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿ ಇತ್ಯರ್ಥಗೊಂಡಿರುವ ಬಗ್ಗೆ ಸರ್ಕಾರದ ವಕೀಲ ಬಸವ ಪ್ರಭು ಪಾಟೀಲ್ ಸ್ಪಷ್ಟಪಡಿಸಿದರು.
ಬಾತ್​ರೂಂ ಹಾಡಿನ ವೃತ್ತಾಂತ
ಬಡ್ತಿ ಮೀಸಲಾತಿ ವಿರೋಧಿಸಿ ವಕೀಲ ರಾಜೀವ್ ಧವನ್ ವಾದಿಸುತ್ತಿದ್ದಾಗ ಪ್ರತಿವಾದಿ ಪರ ವಕೀಲೆ ಇಂದಿರಾ ಜೈಸಿಂಗ್ ಪದೇಪದೆ ಹಸ್ತಕ್ಷೇಪ ಮಾಡುತ್ತಿದ್ದುದು ಭಾರಿ ವಾಗ್ವಾದಕ್ಕೆ ಕಾರಣವಾಯಿತು. ‘ದಯವಿಟ್ಟು ನನಗೆ ಮಾತನಾಡಲು ಬಿಡುತ್ತೀರಾ? ಮಧ್ಯದಲ್ಲಿ ಬಾಯಿ ಹಾಕಿ ಏಕೆ ಹೀಗೆ ತೊಂದರೆ ಕೊಡುತ್ತೀರಿ? ಎಂದು ಧವನ್ ಸಿಡಿಮಿಡಿಗೊಂಡದ್ದಕ್ಕೆ ಪ್ರತಿಕ್ರಿಯಿಸಿದ ಜೈಸಿಂಗ್, ‘ಈ ರೀತಿ ವಾದ ಮಾಡುವುದನ್ನು ಹಿರಿಯರಾದ ನಿಮ್ಮಿಂದಲೇ ನಾನು ಕಲಿತೆ, ನೀವೇ ನನ್ನ ಗುರು’ ಎಂದು ಕಾಲೆಳೆದರು. ‘ನಾನು ನಿಮ್ಮ ಗುರುವಾಗಲು ಸಾಧ್ಯವೇ ಇಲ್ಲ. ನೀವು ಬಂದಾಗ ನಾನು ಈ ಕೋರ್ಟ್​ನಲ್ಲೇ ಇರಲಿಲ್ಲ’ ಎಂದು ವಾದ ಮುಂದುವರಿಸಿದರು. ಸುಪ್ರೀಂ ಕೋರ್ಟ್ ತೀರ್ಪಿಗೆ ಮಾನ್ಯತೆ ನೀಡದ ಸರ್ಕಾರದ ನಡೆ ಖಂಡನೀಯ. ನಾನಿದನ್ನು ಹಾಡಿನ ಮೂಲಕ ವಿವರಿಸಬಲ್ಲೆ. ಆದರೆ,
ಕೋರ್ಟ್​ನಲ್ಲಿ ಹಾಡುವುದು ಸರಿಯಲ್ಲ ಎಂದು ಧವನ್ ಹಾಸ್ಯಚಟಾಕಿ ಹಾರಿಸಿದರು. ಆಗ ಮತ್ತೋರ್ವ ವಕೀಲ ದಿನೇಶ್ ದ್ವಿವೇದಿ, ‘ನಿಮ್ಮ ಹಾಡನ್ನು ಕೇಳಬೇಕಿದೆ, ದಯವಿಟ್ಟು ಹಾಡಿ’ ಎಂದಿದ್ದಕ್ಕೆ, ‘ನಾನು ಹಾಡುವುದನ್ನು ಕೇಳಬೇಕೆಂದರೆ ನನ್ನ ಬಾತ್​ರೂಂ ಹೊರಗಡೆ ಬಂದು ನಿಲ್ಲಿ’ ಎಂದು ಧವನ್ ಹೇಳಿಬಿಟ್ಟರು. ಸಿಡಿಮಿಡಿಗೊಂಡ ಜೈಸಿಂಗ್, ‘ಅಲ್ಲಿಗೆ ಬಂದು ಹಾಡು ಕೇಳುವ ಅಗತ್ಯ ನನಗಂತೂ ಇಲ್ಲ’ ಎಂದರು. ಇದಕ್ಕೆ ಪ್ರತಿಕ್ರಿಯಿಸದ ನ್ಯಾಯಮೂರ್ತಿಗಳು, ಅ.23ಕ್ಕೆ ಸಿಗೋಣ ಎಂದು ಭೋಜನಕ್ಕೆ ತೆರಳಿದರು.

No comments:

Post a Comment

ಅನಿಸಿಕೆ ತಿಳಿಸಿ

ಹೆಚ್ಚು ಓದಿದವು